Saturday, March 24, 2012

ಮಧ್ವ ಪರಂಪರೆ

ಜಗದ್ಗುರು ಶ್ರಿಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ,
ಎಂಟು ಮಂದಿ ಬಾಲ ವಟುಗಳಿಗೆ ಸನ್ಯಾಸಾಶ್ರಮವನ್ನು ನೀಡಿ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ಒಪ್ಪಿಸಿದರು.

ಎಂಟು ಯತಿಗಳ ಹೆಸರು ಇಂತಿವೆ :
ಶ್ರೀ ಹೃಷೀಕೇಶ ತೀರ್ಥರು , ಶ್ರೀ ನರಸಿಂಹ ತೀರ್ಥರು, ಶ್ರೀ ಜನಾರ್ದನ ತೀರ್ಥರು, ಶ್ರೀ ಉಪೇಂದ್ರ ತೀರ್ಥರು, ಶ್ರೀ ವಾಮನ ತೀರ್ಥರು, ಶ್ರೀ ವಿಷ್ಣು ತೀರ್ಥರು, ಶ್ರೀ ರಾಮ ತೀರ್ಥರು, ಹಾಗೂ ಶ್ರೀ ಅಧೋಕ್ಷಜ ತೀರ್ಥರು.
ಇವರುಗಳಿಂದ ಮುಂದುವರೆದ ಪರಂಪರೆಯೇ ಇಂದಿನ ಉಡುಪಿಯ ಅಷ್ಠ ಮಠಗಳು. ಅವುಗಳ ಹೆಸರು ಶ್ರೀ ಪಲಿಮಾರು ಮಠ, ಶ್ರೀ ಅದಮಾರು ಮಠ, ಶ್ರೀ ಕೃಷ್ಣಾಪುರ ಮಠ, ಶ್ರೀ ಪುತ್ತಿಗೆ ಮಠ, ಶ್ರೀ ಶಿರೂರು ಮಠ, ಶ್ರೀ ಕುಂಭಾಸಿ ಮಠ (ಶ್ರೀ ಸೋಂದಾ ಮಠ), ಶ್ರೀ ಕಾಣಿಯೂರು ಮಠ ಹಾಗು ಶ್ರೀ ಪೇಜಾವರ ಮಠ.

ಒಮ್ಮೆ ಶ್ರೀ ಮಧ್ವರು ಗೋದಾವರಿ ತೀರದಲ್ಲಿ ಸಂಚರಿಸುತ್ತಿದ್ದಾಗ, "ಶೋಭನ ಭಟ್ಟ"ರೆಂಬ ಪ್ರಖ್ಯಾತ ಅದ್ವೈತ ಪಂಡಿತರು ಅವರಿಂದ ವಾದದಲ್ಲಿ ಪರಾಜಿತರಾಗಿ ಮುಂದೆ ಅವರಿಂದಲೇ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಅವರೇ ಶ್ರೀ "ಪದ್ಮನಾಭ ತೀರ್ಥ"ರು.
ಮಧ್ವರು ಇವರಿಗೆ ಮಧ್ವ ಮತ ಪ್ರಸಾರದ ಹೊಣೆಗಾರಿಕೆಯನ್ನು ನೀಡಿದರು.
ಇವರ ಹೆಸರು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇವರು ಮಧ್ವರ ಗ್ರಂಥಗಳಿಗೆ ಟೀಕೆಯನ್ನು ರಚಿಸಿದ ಮೊದಲ ಯತಿಗಳೂ ಹೌದು. ಹಾಗಾಗಿ ಇವರು "ಅದ್ಯ ಟೀಕಾಚಾರ್ಯ"ರೆಂದು ಪ್ರಖ್ಯಾತರಾಗಿದ್ದಾರೆ.

ಶ್ರೀ ಪದ್ಮನಾಭ ತೀರ್ಥರ ನಂತರ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಹಾಗೂ ಶ್ರೀ ಅಕ್ಷೋಭ್ಯ ತೀರ್ಥರು ಜಗದ್ಗುರು ಶ್ರೀ ಮಧ್ವರ ಸರ್ವಜ್ಞ ಪೀಠವನ್ನು ಅಲಂಕರಿಸಿದರು. ಮೂವರೂ ಶ್ರೀ ಮಧ್ವರಿಂದಲೇ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು ಎಂಬ ಬಲವಾದ ನಂಬಿಕೆ ಇದೆಯಾದರೂ ಸಾಕಷ್ಟು ಪುರಾವೆಗಳು ಸಿಗುವುದಿಲ್ಲ.

ಶ್ರೀ ಪದ್ಮನಾಭ ತೀರ್ಥರು ಮಧ್ವ ಮತ ಪ್ರಸಾರಕ್ಕಾಗಿ ಒಂದು ಪ್ರತ್ಯೇಕ ಪರಂಪರೆಯನ್ನೇ ಪ್ರಾರಂಭಿಸಿದರು. ಅದುವೇ ಇಂದಿನ ಶ್ರೀ ಶ್ರೀಪಾದರಾಜ ಮಠ ಅಥವಾ ಶ್ರೀ ಮುಳುಬಾಗಿಲು ಮಠ.

ಅವರ ನಂತರ ಸರ್ವಜ್ಞ ಪೀಠವನ್ನಲಂಕರಿಸಿದ ಶ್ರೀ ನರಹರಿತೀರ್ಥರೂ ಒಂದು ಪ್ರತ್ಯೇಕ ಪರಂಪರೆಯನ್ನು ಪ್ರಾರಂಭಿಸಿದರು. ಇದಕ್ಕೆ ಪುರಾವೆ ಶ್ರೀ ಮುಷ್ಣದ ಶಾಸನ ಒಂದರಲ್ಲಿ "ಶ್ರೀ ನರಹರಿ ತೀರ್ಥ ಮಠದ ಜಗನ್ನಾಥ ತೀರ್ಥರು" ಎಂಬ ಉಲ್ಲೇಖ.
ಪರಂಪರೆಯು ಯಾವಾಗ ಲೀನವಾಯಿತು. ಪರಂಪರೆಯಲ್ಲಿ ಎಷ್ಟು ಮಂದಿ ಯತಿಗಳು ಆಗಿ ಹೋದರು ಎಂಬ ಯಾವುದೇ ಮಾಹಿತಿ ನಮಗೆ ಸಿಗದಿರುವುದು ದುರದೃಷ್ಟಕರ. ( ಮಾಹಿತಿಯನ್ನು ನಾನು ಯಾವ ಪುಸ್ತಕದಲ್ಲಿ ಓದಿದೆಯೆಂಬ ವಿಷಯ ಬ್ಲಾಗ್ ಬರೆಯುವ ಸಂದರ್ಭದಲ್ಲಿ ನೆನಪಿಗೆ ಬರುತ್ತಿಲ್ಲ. ಅತಿ ಶೀಘ್ರದಲ್ಲಿಯೇ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತೇನೆ). ಬಹುಶಃ ಪರಂಪರೆಯು ಉತ್ತರ ಭಾರತದಲ್ಲೆಲ್ಲೋ ಅಜ್ಞಾತವಾಗಿದ್ದು ಯಾವುದೇ ಹರಿದಾಸರಿಂದಲೂ ಉಳ್ಲೀಖಿಸಲ್ಪಟ್ಟಿಲ್ಲವೆಂದು ಊಹಿಸಬಹುದಷ್ಟೆ!

ಶ್ರೀ ನರಹರಿ ತೀರ್ಥರ ನಂತರ ಸರ್ವಜ್ಞ ಪೀಠದಲ್ಲಿ ವಿರಾಜಮಾನರಾದ ಶ್ರೀ ಮಾಧವ ತೀರ್ಥರೂ ಮಧ್ವ ಮತದ ಪ್ರಸಾರಣದ ಸಲುವಾಗಿ ತಮ್ಮದೆಯಾದ ಪರಂಪರೆಯೊಂದನ್ನು ಪ್ರಾರಂಭಿಸಿದರು. ಅದುವೇ ಇಂದು ಶ್ರೀ ಮಜ್ಜಿಗೆಹಳ್ಳಿ ಮಠ ಅಥವಾ ಶ್ರೀ ತಂಬೆ ಹಳ್ಳಿ ಮಠ ಎಂದು ಪ್ರಸಿದ್ಧವಾಗಿದೆ.

ಶ್ರೀ ಮಾಧವ ತೀರ್ಥರ ನಂತರದವರಾದ ಶ್ರೀ ಅಕ್ಷೋಭ್ಯ ತೀರ್ಥರೂ ಒಂದು ಪ್ರತ್ಯೇಕ ಪರಂಪರೆಯನ್ನು ಪ್ರಾರಂಭಿಸಿದರು. ಅದು ಮುಂದೆ ಶ್ರೀ ಲೋಕವಂದಿತ ತೀರ್ಥರ ಕಾಲದಲ್ಲಿ ಕವಲೊಡೆದು ಕೂಡ್ಲಿ ಅಕ್ಷೋಭ್ಯ ತೀರ್ಥ ಮಠ ಹಾಗು ಬಾಳೆಗಾರು ಅಕ್ಷೋಭ್ಯ ತೀರ್ಥ ಮಠ ಎಂದು ಪ್ರಸಿದ್ಧಿಗೆ ಬಂತು.

ಶ್ರೀ ಅಕ್ಷೋಭ್ಯ ತೀರ್ಥರ ನಂತರ ಸರ್ವಜ್ಞ ಪೀಠ ಆರೋಹಣ ಮಾಡಿದವರು ಶ್ರೀ ಜಯತೀರ್ಥರು.
ಅವರ ನಂತರ ಬಂದ ಶ್ರೀ ವಿದ್ಯಾಧಿರಾಜರ ಕಾಲದಲ್ಲಿ ಆದಿ ಮಠವು ಮೊದಲ ಬಾರಿಗೆ ಕವಲೊಡೆಯಿತು.

ಶ್ರೀ ವಿದ್ಯಾಧಿರಾಜರ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರಿಂದ ಮುಂದುವರೆದ ಪರಂಪರೆಯೇ ಶ್ರೀ ಪೂರ್ವಾದಿ ಮಠ. ಅದೇ ಪರಂಪರೆಯಲ್ಲಿ ಮುಂದೆ ಬಂದ ಪ್ರಹ್ಲಾದಾವತಾರರಾದ ಶ್ರೀ ವ್ಯಸರಾಜರಿಂದಾಗಿ ಮಠವು "ಶ್ರೀ ವ್ಯಾಸರಾಜ ಮಠ" ಎಂದು ಪ್ರಸಿದ್ಧಿಗೆ ಬಂತು.
ಶ್ರೀ ವಿದ್ಯಾಧಿರಾಜರ ಮತ್ತೋರ್ವ ಶಿಷ್ಯರಾದ ಶ್ರೀ ಕವೀಂದ್ರ ತೀರ್ಥರಿಂದ ಮುಂದುವರೆದ ಪರಂಪರೆಯು ವಿಬುಧೆಂದ್ರ ಮಠ, ವಿಜಯೀಂದ್ರ ಮಠ ಇತ್ಯಾದಿ ನಾಮಧೇಯಗಳಿಂದ ಪ್ರಸಿದ್ಧಿ ಹೊಂದಿ ಪ್ರಹ್ಲಾದಾವತಾರರಾದ ಶ್ರೀ ರಾಘವೇಂದ್ರ ತೀರ್ಥರಿಂದಾಗಿ
ಪ್ರಸ್ತುತ "ಶ್ರೀ ರಾಘವೇಂದ್ರ ತೀರ್ಥ ಮಠ" ಎಂದು ಪ್ರಸಿದ್ಧವಾಗಿದೆ.














will be updated with more details shortly . . . . . . . . . .

No comments:

Post a Comment